Tuesday, 26 September 2017

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 7


ಷಷ್ಠಮ ಆವರಣ ಕೃತಿ

ಕಮಲಾಂಬಿಕಾಯಾಃ   ರಾಗ: ಪುನ್ನಾಗವರಾಳಿ   ತಾಳ: ಆದಿತಾಳ

ಕಮಲಾಂಬಿಕಾಯಾಃ ತವ ಭಕ್ತೋಹಂ ಶ್ರೀ |
ಶಂಕರ್ಯಾಃ ಶ್ರೀಕರ್ಯಾಃ ಸಂಗೀತ ರಸಿಕಾಯಾಃ ಶ್ರೀ ||

ಸುಮಶರೇಷು ಕೋದಂಡ ಪಾಶಾಂಕುಶ ಪಾಣ್ಯಾಃ ||
ಅತಿ ಮಧುರತರ ವಾಣ್ಯಾಃ ಶರ್ವಾಣ್ಯಾಃ ಕಲ್ಯಾಣ್ಯಾ ||

ದಶಕಲಾತ್ಮಕ ವಹ್ನಿಸ್ವರೂಪ ಪ್ರಕಾಶಾಂತರ್ದಶಾರಾ | ಸರ್ವರಕ್ಷಾಕರ ಚಕ್ರೇಶ್ವರ್ಯಾಃ ||
ತ್ರಿದಶಾದಿನುತ ಕಚವರ್ಗದ್ವಯಮಯ ಸರ್ವಜ್ಞಾದಿ | ದಶಶಕ್ತಿ ಸಮೇತ ಮಾಲಿನಿ ಚಕ್ರೇಶ್ವರ್ಯಾಃ |
ತ್ರಿದಶವಿಂಶದ್ವರ್ಣ ಗರ್ಭಿಣೀ ಕುಂಡಲಿನ್ಯಾಃ | ದಶಮುದ್ರಾ ಸಮಾರಾಧಿತ ಕೌಳಿನ್ಯಾಃ ||
ದಶರಥಾದಿನುತ ಗುರುಗುಹ ಜನಕ ಶಿವ ಬೋಧಿನ್ಯಾಃ | ದಶಕರಣವೃತ್ತಿ ಮರೀಚಿ ನಿಗರ್ಭ ಯೋಗಿನ್ಯಾಃ ಶ್ರೀ ||
   ………………………………………………………………………………………………………

  ಶ್ರೀಚಕ್ರದ ಆರನೆಯ ಆವರಣದ ರಚನೆಯಾದ ಶ್ರೀ ಕಮಲಾಂಬಿಕಯಾಸ್ತವ ಭಕತೋಹಂ ಕೃತಿಯು ಷಷ್ಠಿ ವಿಭಕ್ತಿಯಲ್ಲಿದೆ. ಹತ್ತು ತ್ರಿಕೋಣಗಳಿಂದ ಕೂಡಿದ ಈ ಆವರಣದ ಹೆಸರು ಅಂತರ್ದಶಾರ. ಚಕ್ರದ ಹೆಸರು ಸರ್ವರಕ್ಷಾಕರ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರ ಮಾಲಿನಿ. ಯೋಗಿನಿಯ ಹೆಸರು ನಿಗರ್ಭ ಯೋಗಿನಿ. 
   ಈ ಆವರಣದಲ್ಲಿ ಹತ್ತು ತ್ರಿಕೋಣಗಳಿದ್ದು, ಅವುಗಳ ಹೆಸರು ಇಂತಿವೆ.
ಸರ್ವಜ್ಞೆ, ಸರ್ವಶಕ್ತೇ, ಸರ್ವೈಶ್ವರ್ಯಪ್ರದೇ, ಸರ್ವಜ್ಞಾನಮಯೀ, ಸರ್ವವ್ಯಾಧಿನಿವಾರಿಣೀ, ಸರ್ವಾಧಾರ ಸ್ವರೂಪೇ, ಸರ್ವಪಾಪಹರೇ, ಸರ್ವಾನಂದಮಯೀ, ಸರ್ವರಕ್ಷಾಸ್ವರೂಪಿಣೀ, ಸರ್ವೇಪ್ಸಿತಫಲಪ್ರದೇ.
ಈ ಕೃತಿಯ ಪಲ್ಲವಿಯ ಸಾಹಿತ್ಯವೇ ಅದ್ಭುತ. ಶಂಕರನ ಮಡದಿಯೂ, ಶ್ರೀಕರಿಯೂ, ಸಂಗೀತ ರಸಿಕೆಯೂ ಆದ ಶ್ರೀ ಕಮಲಾಂಬಿಕೆಯ ಭಕ್ತನು ನಾನು ಎಂದು ದೀಕ್ಷಿತರು ಕೃತಿಯಲ್ಲಿ ಹೆಮ್ಮೆಯಿಂದ ಹೇಳಿದ್ದಾರೆ.
  ಅನುಪಲ್ಲವಿಯ ಸಾಹಿತ್ಯದಲ್ಲಿ ಪುಷ್ಪಬಾಣವನ್ನೂ , ಕಬ್ಬಿನ ಬಿಲ್ಲನ್ನೂ, ಪಾಶಾಂಕುಶವನ್ನು ಹಿಡಿದಿರುವವಳು ಎಂಬ ಪದವು ಮನೋರೂಪೇಕ್ಷುಕೋದಂಡ(10), ಪಂಚತನ್ಮಾತ್ರ ಸಾಯಕ(11) ಎಂಬ ಲಲಿತಾಸಹಸ್ರನಾಮದ 10,11ನೇ ನಾಮದ ಪ್ರತಿರೂಪದಂತಿದೆ.
  ಚರಣ ಸಾಹಿತ್ಯದಲ್ಲಿ ದೀಕ್ಷಿತರು ವೈಶಿಷ್ಟ್ಯಪೂರ್ಣವಾದ ಕವಿತಾಶಕ್ತಿಯನ್ನು ನೋಡಬಹುದು. ಇಲ್ಲಿ ದಶ ಎಂಬ ಪದ ಆರು ಸಲ ಬಳಸಲ್ಪಟ್ಟಿದೆ. ಅವುಗಳು ಇಂತಿವೆ. 1.ದಶಕಲಾತ್ಮಕ, 2. ಪ್ರಕಾಶಾಂತರ್ದಶಾರಾ, 3. ತ್ರಿದಶಾದಿನುತ, 4. ದಶಶಕ್ತಿ ಸಮೇತ ಮಾಲಿನಿ, 5. ತ್ರಿದಶವಿಂಶದ್ವರ್ಣ, 6. ದಶಮುದ್ರಾ ಸಮಾರಾಧಿತ. 
ಕೃತಿಯಲ್ಲಿ ಬಳಸಲ್ಪಟ್ಟ ಶ್ರೀ ಲಲಿತಾ ಸಹಸ್ರನಾಮದ ನಾಮಗಳು - ಶಂಕರ್ಯಾಃ (ಶ್ರೀ ಲಲಿತಾ ಸಹಸ್ರನಾಮದ 126ನೇ ನಾಮ),  ಶ್ರೀಕರ್ಯಾಃ (ಶ್ರೀ ಲಲಿತಾ ಸಹಸ್ರನಾಮದ 127ನೇ ನಾಮ), ಶರ್ವಾಣ್ಯಾಃ (ಶ್ರೀ ಲಲಿತಾ ಸಹಸ್ರನಾಮದ 124ನೇ ನಾಮ),  ದಶಮುದ್ರಾ ಸಮಾರಾಧಿತ (ಶ್ರೀ ಲಲಿತಾ ಸಹಸ್ರನಾಮದ 977ನೇ ನಾಮ), ಕೌಲಿನ್ಯಾಃ (ಶ್ರೀ ಲಲಿತಾ ಸಹಸ್ರನಾಮದ 94ನೇ ನಾಮ).

Monday, 25 September 2017

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 6


ಪಂಚಮ ಆವರಣ ಕೃತಿ

ಶ್ರೀ ಕಮಲಾಂಬಾಯಾಃ   ರಾಗ: ಭೈರವಿ  ತಾಳ: ಮಿಶ್ರಛಾಪುತಾಳ

ಶ್ರೀ ಕಮಲಾಂಬಾಯಾಃ ಪರಂ ನಹಿ ರೇ ರೇ ಚಿತ್ತ
ಕ್ಷಿತ್ಯಾದಿ ಶಿವಾಂತ ತತ್ತ್ವ ಸ್ವರೂಪಿಣ್ಯಾಃ ||

ಶ್ರೀಕಂಠ ವಿಷ್ಣು ವಿರಿಂಚಾದಿ ಜನಯಿತ್ರಯಾಃ |
ಶಿವಾತ್ಮಕ ವಿಶ್ವಕತ್ರ್ಯಾಃ ಕಾರಯಿತ್ರ್ಯಾಃ ||

ಶ್ರೀಕರ ಬಹಿರ್ದಶಾರ ಚಕ್ರಸ್ಥಿತ್ಯಾ ಸೇವಿತ | ಭೈರವಿ ಭಾರ್ಗವಿ ಭಾರತ್ಯಾಃ ||

ನಾದಮಯ ಸೂಕ್ಷ್ಮರೂಪ ಸರ್ವಸಿದ್ಧಿ ಪ್ರದಾದಿ | ದಶ ಶಕ್ತ್ಯಾರಾಧಿತ ಮೂರ್ತೇಃ |
ಶ್ರೋತ್ರಾದಿ ದಶಕರಣಾತ್ಮಕ ಕುಳ ಕೌಳಿಕಾದಿ | ಬಹುವಿಧೋಪಾಸಿತ ಕೀರ್ತೇಃ |
ಅಭೇದ ನಿತ್ಯ ಶುದ್ಧ  ಬುದ್ಧ ಮುಕ್ತ | ಸಚ್ಚಿದಾನಂದಮಯ ಪರಮಾದ್ವೈತ ಸ್ಪೂರ್ತೇಃ |
ಆದಿ ಮದ್ಯಾಂತ ರಹಿತ ಪ್ರಮೇಯ | ಗುರುಗುಹ ಮೋದಿತ ಸರ್ವಾರ್ಥ ಸಾಧಕ ಪೂರ್ತೇಃ ||

ಮೂಲಾದಿ ನವಾಧಾರ ವ್ಯಾವೃತ್ತ ದಶಧ್ವನಿ ಬೇಧಜ್ಞ ಯೋಗಿ ವೃಂದ ಸಂರಕ್ಷಿಣ್ಯಾಃ |
ವಿನೋದ ಕರಣ ಪಟುತರ ಕಟಾಕ್ಷ ವೀಕ್ಷಣ್ಯಾಃ ||
.......…....….................…............
ಭೈರವಿರಾಗದ ಶ್ರೀ ಕಮಲಾಂಬಿಕಯಾಃ ಪರಂ ನಹಿ ರೇರೇ ಪಂಚಮ ನವಾವರಣ ರಚನೆಯು ಪಂಚಮಿ ವಿಭಕ್ತಿಯಲ್ಲಿದೆ. ಈ ಆವರಣದ ಹೆಸರು ಬಹಿದರ್ಶಾರ. ಚಕ್ರದ ಹೆಸರು ಸರ್ವಾರ್ಥ ಸಾಧಕ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರಾಶ್ರೀ. ಯೋಗಿನಿಯ ಹೆಸರು ಕುಲೋತ್ತೀರ್ಣ ಯೋಗಿನಿ. ಹತ್ತು ತ್ರಿಕೋಣಗಳಿಂದ ಕೂಡಿದ ಈ ತ್ರಿಕೋಣಗಳ ಹೆಸರು ಇಂತಿವೆ.
ಸರ್ವಸಿದ್ಧಿಪ್ರದೇ, ಸರ್ವಸಂಪದ್ಪ್ರದೇ, ಸರ್ವಪ್ರಿಯಂಕರೀ, ಸರ್ವಮಂಗಳಕಾರಿಣೀ, ಸರ್ವಕಾಮಪ್ರದೇ, ಸರ್ವದುಃಖವಿಮೋಚನೀ, ಸರ್ವಮೃತ್ಯುಶಮನೀ, ಸರ್ವವಿಘ್ನನಿವಾರಿಣೀ, ಸರ್ವಾಂಗ ಸುಂದರೀ, ಸರ್ವಸೌಭಾಗ್ಯದಾಯಿನೀ.
ದೀಕ್ಷಿತರು ಪಲ್ಲವಿಯಲ್ಲಿ ಶ್ರೀ ಕಮಲಾಂಬಿಕಾಯಾಃ ಪರಂ ನಹಿ ರೇ ರೇ ಎಂದು ಹೇಳಿದ್ದಾರೆ. ಅಂದರೆ ಕಮಲಾಂಬಿಕೆಗಿಂತಲೂ ಬೇರೆ ಯಾವುದು ಇಲ್ಲವೇ ಇಲ್ಲ ಅಂದಿದ್ದಾರೆ. ಬ್ರಹ್ಮ, ವಿಷ್ಣು, ರುದ್ರರ ಜನನಿ ಇವಳು. ಶಿವಸ್ವರೂಪವಾದ ಪ್ರಪಂಚವನ್ನು ಸೃಷ್ಟಿಸುವವಳು, ಪಾಲಿಸುವವಳು ಇವಳೇ ಅಂದಿದ್ದಾರೆ. ಚರಣದಲ್ಲಿ ನಾದ ಸೂಕ್ಷ್ಮರೂಪಳೆಂದು ತಾಯಿಯನ್ನು ಹೊಗಳಿದ್ದಾರೆ. ದಶ ಶಕ್ತಿಗಳಿಂದ ಆರಾಧಿತಳೂ, ಬಹುವಿಧಗಳಿಂದ ಪೂಜೆಗೊಳ್ಳುವವಳೂ ಎಂದಿದ್ದಾರೆ. ಕೊನೆಯ ಪದವಾದ ಕಟಾಕ್ಷ ವೀಕ್ಷಣ್ಯಾಃ ಪದದ ಮೂಲಕ ತನ್ನ ಸಮರ್ಥವಾದ ಕಡೆಗಣ್ಣ ನೋಟವುಳ್ಳ ಕಮಲಾಂಬಿಕೆಗಿಂತ ಅನ್ಯ ಯಾವುದಿದೆ. ಅವಳೇ ಎಲ್ಲ , ಅವಳಿಂದಳೇ ಎಲ್ಲ ಎಂದು ದೀಕ್ಷಿತರು ಹೇಳಿದ್ದಾರೆ.

Sunday, 24 September 2017

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 5


ಚತುರ್ಥ ನವಾವರಣ ಕೃತಿ
ಕಮಲಾಂಬಿಕಾಯೈ            ರಾಗ: ಕಾಂಭೋಜಿ           ತಾಳ: ಅಟ್ಟತಾಳ

ಕಮಲಾಂಬಿಕಾಯೈ ಕನಕಾಂಶುಕಾಯೈ | ಕರ್ಪೂರ ವೀಟಿಕಾಯೈ ನಮಸ್ತೇ ನಮಸ್ತೇ ||
ಕಮಲಾ ಕಾಂತಾನುಜಾಯೈ ಕಾಮೇಶ್ವರ್ಯೈ ಅಜಾಯೈ | 
ಹಿಮಗಿರಿ ತನುಜಾಯೈ ಹ್ರೀಂಕಾರ ಪೂಜ್ಯಾಯೈ ||

ಕಮಲಾ ನಗರ ವಿಹಾರಿಣ್ಯೈ | ಖಲ ಸಮೂಹ ಸಂಹಾರಿಣ್ಯೈ |
ಕಮಣೀಯ ರತ್ನ ಹಾರಿಣ್ಯೈ |  ಕಲಿಕಲ್ಮಷ ಹಾರಿಣ್ಯೈ ||

ಸಕಲ ಸೌಭಾಗ್ಯದಾಯೈ | ಕಾಂಭೋಜ ಚರಣಾಯೈ |
ಸಂಕ್ಷೋಭಿಣ್ಯಾಧಿ ಶಕ್ತಿಯುತ ಚತುರ್ಥ ಆವರಾಣಾಯೈ |
ಪ್ರಕಟ ಚತುರ್ದಶ ಭುವನ ಭರಣಾಯೈ |
ಪ್ರಬಲ ಗುರುಗುಹ ಸಂಪ್ರದಾಯಾಂತಃ ಕರಣಾಯೈ |
ಅಕಳಂಕ ರೂಪ ವರ್ಣಾಯೈ ಅಪರ್ಣಾಯೈ ಸುಪರ್ಣಾಯೈ |
ಸುಕರದೃತ ಛಾಪಬಾಣಾಯೈ | ಶೋಭನಕರ ಮನುಕೋಣಾಯೈ ||

ಸಕುಂಕುಮಾದಿ ಲೇಪನಾಯೈ | ಚರಾಚರಾದಿ ಕಲ್ಪನಾಯೈ |
ಚಿಕುರ ವಿಜಿತ ನೀಲ ಘನಾಯೈ | ಚಿದಾನಂದ ಪೂರ್ಣ ಘನಾಯೈ ||

   ಕಾಂಭೋಜಿ ರಾಗದ ಕಮಲಾಂಬಿಕಾಯೈ ಈ ಕೃತಿಯು ಕಮಲಾಂಬಾ ನವಾವರಣದ ಚತುರ್ಥ ಆವರಣ ಕೃತಿಯಾಗಿದೆ. ಚತುರ್ಥಿ ವಿಭಕ್ತಿಯಲ್ಲಿದೆ. ಆವರಣದ ಹೆಸರು ಸರ್ವಸೌಭಾಗ್ಯದಾಯಕ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರವಾಸಿನಿ. ಯೋಗಿನಿಯ ಹೆಸರು ಸಂಪ್ರದಾಯ ಯೋಗಿನಿ.
  ಶ್ರೀಚಕ್ರದ ನಾಲ್ಕನೆಯ ಆವರಣವಾದ ಇದು ಹದಿನಾಲ್ಕು ತ್ರಿಕೋಣಗಳಿಂದ ಕೂಡಿದೆ. ಆ ಹದಿನಾಲ್ಕು ತ್ರಿಕೋಣಗಳ ಹೆಸರು ಇಂತಿವೆ.
  ಸರ್ವಸಂಕ್ಷೋಭಿಣಿ, ಸರ್ವವಿದ್ರಾವಿಣಿ, ಸರ್ವಾಕರ್ಷಿಣಿ, ಸರ್ವಾಹ್ಲಾದಿನಿ, ಸರ್ವಸಮ್ಮೋಹಿನಿ, ಸರ್ವಸ್ತಂಭಿಣಿ, ಸರ್ವಜೃಂಭಿಣಿ, ಸರ್ವವಶಂಕರಿ, ಸರ್ವರಂಜನಿ, ಸರ್ವೋನ್ಮಾದಿನಿ, ಸರ್ವಾರ್ಥಸಾಧಿಕೆ, ಸರ್ವಸಂಪತ್ತಿಪೂರಣ, ಸರ್ವಮಂತ್ರಮಯೀ, ಸರ್ವದ್ವಂದ್ವಕ್ಷಯಕರೀ.
  ಪಲ್ಲವಿಯಲ್ಲಿಯೆ ಕರ್ಪೂರ ವೀಟಿಕಾ ಎಂಬ ಲಲಿತಾ ಸಹಸ್ರನಾಮದ 26ನೆ ನಾಮವನ್ನು ಬಳಸಿಕೋಳ್ಳಲಾಗಿದೆ.
ಚರಣದಲ್ಲಿ ಮೊದಲ ಸಾಲಿನಲ್ಲಿ ಸಕಲ ಸೌಭಾಗ್ಯದಾಯಕಾಂಭೋಜ ಚರಣಾಯೈ ಎಂಬಲ್ಲಿ ಆವರಣ ಚಕ್ರದ ನಾಮದೊಂದಿಗೆ ರಾಗಮುದ್ರೆಯನ್ನು ಸುಲಲಿತವಾಗಿ ಪೋಣಿಸಲಾಗದೆ. ಈ ಚಕ್ರದಲ್ಲಿರುವ ಹದಿನಾಲ್ಕು ತ್ರಿಕೋಣಗಳನ್ನು ಹದಿನಾಲ್ಕು ಲೋಕಗಳಿಗೆ ದೀಕ್ಷಿತರು ಹೋಲಿಸಿದ್ದಾರೆ. ಲಲಿತಾಸಹಸ್ರನಾಮವಾದ ಅಪರ್ಣಾ, ಲಲಿತಾ ತ್ರಿಶತಿಯ ಸಕುಂಕುಮದಿ ಲೇಪನಾ ಎಂಬ ನಾಮಗಳು ಕೃತಿಯ ಘನತೆಯನ್ನು ಇಮ್ಮಡಿಗೊಳಿಸಿದೆ.  ಕೃತಿಯನ್ನು ಗಮನಿಸಿದರೆ ಎಲ್ಲಾ ಪದವು ಯೈ ಎಂದು ಕೊನೆಗೊಳ್ಳುತ್ತದೆ. ಇದೂ ಕೃತಿಯ ಸೊಗಸಿಗೊಂದು ಹಿಡಿದ ಕನ್ನಡಿಯಾಗಿದೆ.

Friday, 22 September 2017

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 4



ತೃತೀಯ ನವಾವರಣ ಕೃತಿ

ಶ್ರೀಕಮಲಾಂಬಿಕಯಾ ಕಟಾಕ್ಷಿ ತೋಹಂ ರಾಗ: ಶಂಕರಾಭರಣ ತಾಳ: ರೂಪಕ ತಾಳ

ಶ್ರೀ ಕಮಲಾಂಬಿಕಯಾ ಕಟಾಕ್ಷಿತೋಹಂ | ಸಚ್ಚಿದಾನಂದ ಪರಿಪೂರ್ಣ ಬ್ರಹ್ಮಾಸ್ಮಿ ||
ಪಾಕಾಶಾಸನಾದಿ ಸಕಲ ದೇವತಾ ಸೇವಿತಯಾ | ಪಂಕಜಾಸನಾದಿ ಪಂಚಕೃತ್ಯ ಕೃತ್ ಭಾವಿತಯಾ ||

ಕೋಕಹರ ಚತುರಪದಯಾ | ಮೂಕ ವಾಕ್ಯವಾಕ್ ಪ್ರದಯಾ |
ಕೋಕನದ ವಿಜಯ ಪದಯಾ | ಗುರುಗುಹ ತತ್ರೈ ಪದಯಾ ||

ಅನಂಗ ಕುಸುಮಾದ್ಯಷ್ಟ ಶಕ್ತ್ಯಾ ಕಾರಯಾ | ಅರುಣ ವರ್ಣ ಸಂಕ್ಷೋಭಣ ಚಕ್ರ ಕಾರಯಾ |
ಅನಂತ ಕೋಟ್ಯಂಡ ನಾಯಕ ಶಂಕರ ನಾಯಿಕಯಾ | ಅಷ್ಟವರ್ಗಾತ್ಮಕ ಗುಪ್ತತರಯಾ ವರಯಾ ||

ಅನಂಗಾದ್ಯುಪಾಸಿತಯಾ | ಅಷ್ಟದಳಾಬ್ಜ ಸ್ಥಿತಯಾ |
ಧನುರ್ಭಾಣಧರಕರಯಾ ದಯಾ ಸುಧಾ ಸಾಗರಯಾ ||


ಶ್ರೀ ಕಮಲಾಂಬಾ ನವಾವರಣದ ಮೂರನೇ ಕೃತಿಯಾದ ಶಂಕರಾಭರಣ ರಾಗದ ಶ್ರೀ ಕಮಲಾಂಬಿಕಯಾ ಕಟಾಕ್ಷಿತೊಹಂ ಮೂರನೇ ವಿಭಕ್ತಿಯಲ್ಲಿದೆ. ಈ ಆವರಣದ ಚಕ್ರದ ಹೆಸರು ಸರ್ವಸಂಕ್ಷೋಭಣ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರಸುಂದರಿ, ಯೋಗಿನಿಯಹೆಸರು ಗುಪ್ತತರ ಯೋಗಿನಿ. ಈ ಕೃತಿಯು ಶ್ರೀ ಚಕ್ರದ ಮೂರನೆಯ ಆವರಣದ ಅಷ್ಟ ಕಮಲದಳವನ್ನು ಸಂಭೋಧಿಸುತ್ತದೆ. ಆ ಅಷ್ಟ ಕಮಲದಳಗಳ ಹೆಸರು ಇಂತಿವೆ.
ಅನಂಗ ಕುಸುಮಾ, ಅನಂಗ ಮೇಖಲಾ, ಅನಂಗ ಮದನಾ, ಅನಂಗ ಮದನಾತುರಾ, ಅನಂಗ ರೇಖಾ, ಅನಂಗ ವೇಗಿನಿ, ಅನಂಗಾಮಕುಶ, ಅನಂಗಮಾಲಿನಿ.
  
 ದೀಕ್ಷಿತರ ಸಾಹಿತ್ಯ ಜ್ಞಾನ ಯಾವ ರೀತಿ ಇದೆ ಎಂದು ಈ ಕೃತಿಯ ಪದಭಂಡಾರವನ್ನು ನೋಡಿದಾಗ ತಿಳಿಯುತ್ತದೆ.  ‘ಪಂಕಜಾಸನಾದಿ ಪಂಚಕೃತ್ಯ ಕೃತ್ ಭಾವಿತಯಾ’, ‘ಅನಂಗ ಕುಸುಮಾದ್ಯಷ್ಟ ಶಕ್ತ್ಯಾ ಕಾರಯಾ’,’ಅನಂತ ಕೋಟ್ಯಂಡ ನಾಯಕ ಶಂಕರ ನಾಯಿಕಯಾ’, ‘ಅನಂಗಾದ್ಯುಪಾಸಿತಯಾ’, ‘ಧನುರ್ಭಾಣಧರಕರಯಾ’ ಮುಂತಾದ ನಾಮಗಳು ಯಾವ ಲಲಿತಾ ಸಹಸ್ರನಾಮ, ಲಲಿತಾತ್ರಿಶತೀಗೂ ಕಡಿಮೆಯಿಲ್ಲದಂತಿದೆ. ಇಲ್ಲಿ ರಾಗ ಮದ್ರೆಯನ್ನು ದೀಕ್ಷಿತರು ಸಾಹಿತ್ಯಭಾವಕ್ಕೆ ದಕ್ಕೆಯಾಗದಂತೆ ಶಂಕರ ನಾಯಿಕಯಾ(ಶಂಕರಾಭರಣ) ಎಂದು ಬಹಳ ಜಾಣ್ಮೆಯಿಂದ ಬಳಸಿಕೊಂಡಿದ್ದಾರೆ ಎನಿಸುತ್ತದೆ. ನಾವು ಶ್ರೀ ಕಮಲಾಂಬೆಯನ್ನು ದುರಿತವ ದೂರಿಕರಿಸು ಎಂದು ಭಕ್ತಿಯಿಂದ ಬೇಡಿಕೊಳ್ಳೋಣ.

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 3

ದ್ವಿತೀಯ  ನವಾವರಣ ಕೃತಿ

ಕಮಲಾಂಬಾಂ ಭಜರೇ ರೇ    ರಾಗ: ಕಲ್ಯಾಣಿ       ತಾಳ: ಆದಿತಾಳ      

ಕಮಲಾಂಬಾಂ  ಭಜರೇ ರೇ ಮಾನಸ
ಕಲ್ಪಿತ ಮಾಯಾಕಾರ್ಯಂ ತ್ಯಜರೇ  ||

ಕಮಲಾವಾಣೀ ಸೇವಿತ ಪಾಶ್ರ್ವಾಂ
ಕಂಬು ಜಯ ಗ್ರೀವಾಂ ನತದೇವಾಂ||

ಸರ್ವಾಶಾಪಾರಿಪೂರಕ ಚಕ್ರಸ್ವ್ವಾಮಿನೀಂ | ಪರಮ ಶಿವಕಾಮಿನೀಂ |
ದೂರ್ವಾಸಾರ್ಚಿತ ಗುಪ್ತಯೋಗಿನೀಂ | ದುಃಖಧ್ವಂಸಿನೀಂ |
ನಿರ್ವಾಣ ನಿಜಸುಖ ಪ್ರದಾಯಿನೀಂ | ನಿತ್ಯ ಕಲ್ಯಾಣೀಂ ಕಾತ್ಯಾಯಿನೀಂ |
ಶರ್ವಾಣೀಂ ಮಧುಪ ವಿಜಯ ವೇಣೀಂ | ಸದ್ಗುರುಗುಹ ಜನನೀಂ ನಿರಂಜನೀಂ ||

ಗರ್ವಿತ ಭಂಡಾಸುರ ಭಂಜನೀಂ | ಕಾಮ್ಯಾಕರ್ಷಣಾದಿ ರಂಜನೀಂ |
ನಿರ್ವಿಶೇಷ ಚೈತನ್ಯರೂಪಿಣೀಂ | ಉರ್ವೀ ತತ್ತ್ವಾದಿ ಸ್ವರೂಪಿಣೀಂ ||
         
   …………………………………………………………


    ಕಲ್ಯಾಣಿ ರಾಗದ ಈ ದ್ವಿತೀಯ ನವಾವರಣ ಕೃತಿಯು ದ್ವಿತೀಯ ವಿಭಕ್ತಿಯಲ್ಲಿದೆ. ಶ್ರೀಚಕ್ರದ ದ್ವಿತೀಯ ಆವರಣವಾದ ಷೋಡಶದಳ ಪದ್ಮ(ಹದಿನಾರು ದಳದ ಪದ್ಮ)ವನ್ನು ಕೃತಿಯು ಸಂಭೋದಿಸುತ್ತದೆ. ಕೃತಿಯ ಕೊನೆಗೆ ಕಾಮ್ಯಾಕರ್ಷಣಾದಿ ನಿರಂಜನೀ ಎಂದು ದೇವಿಯನ್ನು ದೀಕ್ಷಿತರು ಹೊಗಳಿದ್ದಾರೆ. ಇದು ಚಕ್ರದ ದ್ವಿತೀಯ ಆವರಣವಾದ ಹದಿನಾರು ಕಮಲದಳಗಳ ಹೆಸರು.
   ಈ ಹದಿನಾರು ಕಮಲದಳಗಳ ಹೆಸರು ಇಂತಿವೆ. ಕಾಮ್ಯಾಕರ್ಷಣಿ, ಬುದ್ಯಾಕರ್ಷಣಿ, ಅಹಂಕಾರಾಕರ್ಷಿಣಿ, ಶಬ್ದಾಕರ್ಷಿಣಿ, ಸ್ಪರ್ಶಾಕರ್ಷಿಣಿ, ರೂಪಾಕರ್ಷಿಣಿ, ರಸಾಕರ್ಷಿಣಿ, ಗಂಧಾಕರ್ಷಿಣಿ, ಚಿತ್ತಾಕರ್ಷಿಣಿ, ಧೈರ್ಯಾಕರ್ಷಿಣಿ, ಸ್ಮøತ್ಯಾಕರ್ಷಿಣಿ, ನಾಮಾಕರ್ಷಿಣಿ, ಬೀಜಾಕರ್ಷಿಣಿ, ಆತ್ಮಾಕರ್ಷಿಣಿ, ಅಮೃತಾಕರ್ಷಿಣಿ, ಶರೀರಾಕರ್ಷಿಣಿ.
ಚರಣದಲ್ಲಿ ಸರ್ವಶಾಪರಿಪೂರಕ ಚಕ್ರಸ್ವಾಮಿನಿಂ ಎಂದು ದೀಕ್ಷಿತರು ದೇವಿಯನ್ನು ಹೊಗಳಿದ್ದಾರೆ. ಷೋಡಶ ದಳ ಪದ್ಮದ ಚಕ್ರದ ಹೆಸರು ಸರ್ವಶಾಪರಿಪೂರಕ ಚಕ್ರ.
   ಶರ್ವಾಣೀಂ(ಲಲಿತಾ ಸಹಸ್ರನಾಮದ 124ನೇ ನಾಮ), ಕಾತ್ಯಾಯಿನೀಂ(ಲಲಿತಾಸಹಸ್ರನಾಮದ 556ನೇ ನಾಮ), ನಿರಂಜನೀ(ಲಲಿತಾಸಹಸ್ರನಾಮದ 133ನೇ ನಾಮ), ದುಃಖಧ್ವಂಸಿನೀ(ಲಲಿತಾ ಸಹಸ್ರನಾಮದ 191ನೇ ನಾಮ ದುಃಖಹಂತ್ರಿಯ ಪ್ರತಿರೂಪದಂತಿದೆ.), ಜನನೀ(ಲಲಿತಾ ಸಹಸ್ರನಾಮದ 823ನೇ ನಾಮ), ರಂಜನೀ(ಲಲಿತಾಸಹಸ್ರನಾಮದ 306ನೆ ನಾಮ)ಮುಂತಾದ ಲಲಿತಾ ಸಹಸ್ರನಾಮದ ನಾಮಗಳು ಈ ಕೃತಿಯಲ್ಲಿ ಅದ್ಭುತವಾಗಿ ಹೆಣೆಯಲ್ಪಟ್ಟಿದೆ. ಗರ್ವಿತ ಭಂಡಾಸುರ ಮರ್ದಿನಿ ಎಂಬ ನಾಮವು ಶ್ರೀ ಲಲಿತೋಪಖ್ಯಾನವನ್ನು ನೆನಪಿಸುತ್ತದೆ.
   ಕೊನೆಯ ಸಾಲಿನಲ್ಲಿರುವ ಉರ್ವೀ ತತ್ತ್ವಾದಿ ಚೈತನ್ಯ ಸ್ವರೂಪಿಣೀ ಎಂಬ ಪದವು ಶ್ರೀ ಚಕ್ರದ 36 ತತ್ತ್ವಗಳನ್ನು ಪ್ರತಿಪಾದಿಸುತ್ತದೆ. ಈ 36 ತತ್ತ್ವಗಳೇ ಶ್ರೀ ಚಕ್ರದ ಉಸಿರು ಎನ್ನಲಾಗಿದೆ. ‘ಹಾಂ’ ಎಂಬ ಬೀಜಾಕ್ಷರವನ್ನು ಈ ತತ್ತ್ವಗಳು ಒಳಗೊಂಡಿವೆ. ಆ 36 ತತ್ತ್ವಗಳು ಇಂತಿವೆ.
    ಪ್ರಥ್ವೀ ತತ್ತ್ವ, ಜಲ ತತ್ತ್ವ, ತೇಜ ತತ್ತ್ವ, ವಾಯು ತತ್ತ್ವ, ಆಕಾಶ ತತ್ತ್ವ, ಗಂಧ ತತ್ತ್ವ, ರಸ ತತ್ತ್ವ, ರೂಪ ತತ್ತ್ವ, ಸ್ಪರ್ಶ ತತ್ತ್ವ, ಶಬ್ದ ತತ್ತ್ವ, ಉಪಸ್ಥ ತತ್ತ್ವ, ಪಾದ ತತ್ತ್ವ, ಪಾಣಿ ತತ್ತ್ವ, ವಾಕ್ ತತ್ತ್ವ, ಘ್ರಾಣ ತತ್ತ್ವ, ಜಿಹ್ವಾ ತತ್ತ್ವ, ನೇತ್ರ ತತ್ತ್ವ, ತ್ವಕ್ ತತ್ತ್ವ, ಶ್ರೋತೃ ತತ್ತ್ವ, ಮನಃಸ್ತತ್ತ್ವ, ಅಹಂಕಾರ ತತ್ತ್ವ, ಬುದ್ಧಿ ತತ್ತ್ವ, ಪ್ರಕೃತಿ ತತ್ತ್ವ, ಮಾಯಾ ತತ್ತ್ವ, ಪುರುಷ ತತ್ತ್ವ, ಶುದ್ಧ ವಿದ್ಯಾ ತತ್ತ್ವ, ನಿಯತಿ ತತ್ತ್ವ, ಈಶ್ವರ ತತ್ತ್ವ, ಕಾಲ ತತ್ತ್ವ, ಸದಾಶಿವ ತತ್ತ್ವ, ರಾಗ ತತ್ತ್ವ, ಶಕ್ತಿ ತತ್ತ್ವ, ಕಲಾ ತತ್ತ್ವ, ಶಿವ ತತ್ತ್ವ, ಆತ್ಮ ತತ್ತ್ವ

Thursday, 21 September 2017

ಶ್ರೀ ಕಮಲಾಂಬಾ ನವಾವರಣ ಕೃತಿಯ ನವರಾತ್ರಿ ವೈಭವ - 2

                                       

                                 ಧ್ಯಾನ ಕೃತಿ

ಕಮಲಾಂಬಿಕೇ                ರಾಗ: ತೋಡಿ            ತಾಳ: ರೂಪಕ ತಾಳ
   ಕಮಲಾಂಬಿಕೇ ಆಶ್ರಿತ ಕಲ್ಪಲತಿಕೇ ಚಂಡಿಕೇ 
    ಕಮನೀಯಾರುಣಾಂಶುಕೇ ಕರವಿಧೃತ ಶುಕೇ ಮಾಮವ ||
    
    ಕಮಲಾಸನಾದಿ ಪೂಜಿತ ಕಮಲ ಪದೇ ಬಹುವರದೇ |
  ಕಮಲಾಲಯ ತೀರ್ಥ ವೈಭವೇ ಶಿವೇ ಕರುಣಾರ್ಣವೇ || | ಶ್ರೀ ಕಮಲಾಂಬಿಕೇ |

  ಸಕಲ ಲೋಕನಾಯಿಕೇ ಸಂಗೀತರಸಿಕೇ |
  ಸುಕವಿತ್ವ ಪ್ರದಾಯಿಕೇ ಸುಂದರೀ ಗತಮಾಯಿಕೇ |
  ವಿಕಳೇಬರ ಮುಕ್ತಿದಾನ ನಿಪುಣೇ ಅಘಹರಣೇ |
  ವಿಯದಾದಿ ಭೂತ ಕಿರಣೇ ವಿನೋದ ಚರಣೇ ಅರುಣೇ ||  | ಶ್ರೀ ಕಮಲಾಂಬಿಕೇ |

 ಸಕಲೇ ಗುರುಗುಹ ಚರಣೇ | ಸದಾಶಿವಾಂತಃ ಕರಣೇ |
 ಅಕಚಟತಪಾದಿ ವರ್ಣೇ | ಅಕSಂಡೈಕ ರಸಪೂರ್ಣೇ ||  | ಶ್ರೀ ಕಮಲಾಂಬಿಕೇ |

   ಈ ರಚನೆ ಕಮಲಾಂಬಾ ನವಾವರಣ ಕೃತಿಗಳಿಗೆ ಧ್ಯಾನ ಕೃತಿಯಾಗಿದೆ. ಇನ್ನು ಮುಂದೆ ಬರುವ ಹತ್ತು ರಚನೆಗಳು ಕಮಲಾಂಬಿಕೆ ಎಂಬ ನಾಮದಿಂದಲೇ ಆರಂಭಗೊಳ್ಳುವುದು. ಇಲ್ಲಿನ ವಿಶೇಷವೆಂದರೆ ಎಲ್ಲಾ ವಿಭಕ್ತಿಗಳಲ್ಲೂ ಕ್ರಮವಾಗಿ ರಚನೆಯಾಗುವುದರಿಂದ ಈ ರಚನೆಗಳನ್ನು  ‘ಕಮಲಾಂಬಾ ವಿಭಕ್ತಿ ಕೃತಿಗಳು’ ಎಂದು ಕರೆಯಲಾಗುತ್ತದೆ. ನವರಾತ್ರಾರಂಭದ ದಿನ ಅಂದರೆ ಪಾಡ್ಯದಂದು ಈ ತೋಡಿರಾಗದ ಕಮಲಾಂಬಿಕೇ ಧ್ಯಾನಕೃತಿಯನ್ನು ಹಾಡಿ, ನಂತರ ಆನಂದಭೈರವಿ ರಾಗದ ‘ಶ್ರೀ ಕಮಲಾಂಬ ಸಂರಕ್ಷತುಮಾಂ’ ಕೃತಿ ಹಾಡುವುದು ಸಂಪ್ರದಾಯ.
   ತೋಡಿ ರಾಗದ ಈ ಕೃತಿಯಲ್ಲಿ ದೀಕ್ಷಿತರ ಅತಿಶಯವಾದ ಭಕ್ತಿ, ಜ್ಞಾನ, ಶ್ರದ್ಧೆಯು ಗೋಚರಿಸಲ್ಪಡುತ್ತದೆ. ದೇವಿಯನ್ನು ವಿವಿಧ ನಾಮಗಳಿಂದ ಹಾಡಿ ಹೊಗಳಿದ್ದಾರೆ. ಈ ಕೃತಿಯು ಮುಂದಿನ ಹತ್ತು ಕೃತಿಗಳಿಗೆ ಪೀಠಿಕಾರೂಪದಲ್ಲಿದೆ. ಇಲ್ಲಿ ದೀಕ್ಷಿತರ ಅಕ್ಷರ ಪ್ರೌಢಿಮೆ ಸ್ಪಷ್ಟವಾಗಿ ಗೋಚರಿಸುತ್ತದೆ.
ಕಮಲಾಂಬಿಕೇ ಆಶ್ರಿತ ಕಲ್ಪಲತಿಕೇ ಚಂಡಿಕೇ | ಕಮನೀಯಾರುಣಾಂಶುಕೇ ಕರವಿಧೃತ ಶುಕೇ ಮಾಮವ ||
ಕಮಲಾಸನಾದಿ ಪೂಜಿತ ಕಮಲ ಪದೇ ಬಹುವರದೇ | ಕಮಲಾಲಯ ತೀರ್ಥ ವೈಭವೇ ಶಿವೇ ಕರುಣಾರ್ಣವೇ ||
 ಪಲ್ಲವಿ ಮತ್ತು ಅನುಪಲ್ಲವಿಯ ಈ ಸಾಹಿತ್ಯ ಶ್ರೀಲಲಿತಾ ತ್ರಿಶತಿಯ ಕಕಾರಾದಿ ನಾಮಗಳ ಹಾಗೆ ಕಂಡುಬರುತ್ತದೆ.
 ಚರಣ ಸಾಹಿತ್ಯದ ಸುಕವಿತ್ವಪ್ರದಾಯಿಕೆ (ಶ್ರೇಷ್ಠ ಕವಿತಾಶಕ್ತಿಯನ್ನು ಅನುಗ್ರಹಿಸುವವಳು) ಪದವನ್ನು ಗಮನಿಸಿದರೆ ದೀಕ್ಷಿತರು ಮುಂದಿನ ತಮ್ಮ ರಚನೆಗೆ ಪ್ರೇರಕಳಾಗಿ ಅನುಗ್ರಹಿಸು ಎಂದು ದೈನ್ಯತೆಯಿಂದ ತಾಯಿಯನ್ನು  ಬೇಡಿದಂತಿದೆ. ಕೃತಿಯ ಕೊನೆಯ ಸಾಲು ಅಕಚಟತಪಾದಿ ವರ್ಣೇ, ಅSಂಡೈಕ ರಸಪ್ರರ್ಣೇ ಎಂಬ ಸಾಹಿತ್ಯ ದೀಕ್ಷಿತರು ಕಮಲಾಂಬಿಕೆಯನ್ನು ಮೈನವಿರೇಳಿಸುವಂತೆ ಸ್ತುತಿಸುತ್ತಿರುವಂತೆ ಕಾಣುತ್ತದೆ.
     ……………………………………………………………………………
               
          ಪ್ರಥಮ ನವಾವರಣ ಕೃತಿ
             ******************************

 ಕಮಲಾಂಬಾಂ ಸಂರಕ್ಷತುಮಾಂ     ರಾಗ: ಆನಂದ ಭೈರವಿ      ತಾಳ: ಮಿಶ್ರಛಾಪುತಾಳ
ಕಮಲಾಂಬಾಂ ಸಂರಕ್ಷತು ಮಾಂ | ಶ್ರೀಹೃತ್ ಕಮಲಾ ನಗರ ನಿವಾಸಿನೀ ||

ಸುಮನ ಸಾರಾದಿತಾಬ್ಜಮುಖೀ | ಸುಂದರ ಮನ ಪ್ರಿಯಕರ ಸಖೀ
ಕಮಲಜಾನಂದ ಭೋಧ ಸುಖೀ | ಕಾಂತಾತಾರ ಪಂಜರ ಶುಕೀ ||

ತ್ರಿಪುರಾದಿ ಚಕ್ರೇಶ್ವರೀ ಅಣಿಮಾದಿ ಸಿದ್ಧೀಶ್ವರೀ |
ನಿತ್ಯ ಕಾಮೇಶ್ವರೀ ಕ್ಷಿತ್ರಿಪುರಾದಿ ತ್ರೈಲೋಕ್ಯ ಮೋಹನ
ಚಕ್ರವರ್ತಿನೀ ಪ್ರಕಟಯೋಗಿನೀ |
ಸುರರಿಪು ಮಹಿಷಾಸುರಾದಿ ಮರ್ದಿನಿ |
ನಿಗಮ ಪುರಾಣಾದಿ ಸಂವೇದಿನೀ ||

ತ್ರಿಪುರೇಶಿ ಗುರುಗುಹ ಜನನೀ | ತ್ರಿಪುರ ಭಂಜನ ರಂಜನೀ |
ಮಧುರಿಪು ಸಹೋದರಿ ತಲೋದರಿ | ತ್ರಿಪುರ ಸುಂದರೀ ಮಹೇಶ್ವರೀ ||
   ………………………………………………………………

ಕಮಲಾಂಬಾ ಸಂರಕ್ಷತುಮಾಂ ಕೃತಿಯು ಶ್ರೀಚಕ್ರದ ಮೊದಲ ಆವರಣ ಕೃತಿ. ಪ್ರಥಮಾ ವಿಭಕ್ತಿ ಕೃತಿ. ಈ ಕೃತಿಯು ಶ್ರೀಚಕ್ರದ ಮೊದಲನೆಯ ಆವರಣವಾದ ಭೂಪುರ ಚಕ್ರವನ್ನು ಸಂಭೋಧಿಸುತ್ತದೆ. ಭೂಪುರದ ಚಕ್ರದ ಹೆಸರು ತ್ರೈಲೋಕ್ಯ ಮೋಹನ ಚಕ್ರ. ಚಕ್ರೇಶ್ವರಿಯ ಹೆಸರು ತ್ರಿಪುರಾ. ಯೋಗಿನಿಯ ಹೆಸರು ಪ್ರಕಟಯೋಗಿನಿ. ಈ ಎಲ್ಲಾ ವಿವರಗಳನ್ನು ದೀಕ್ಷಿತರು ಕೃತಿಯಲ್ಲಿ ಜಾಣ್ಮೆಯಿಂದ ಜೋಡಿಸಿದ್ದರೆ.

                                             ಮೂರು ರೇಖೆಗಳಿರುವ   ಭೂಪುರ ಚಕ್ರ
                                         ..........................................................
 
    ಭೂಪುರ ಚಕ್ರದಲ್ಲಿ ಮೂರು ರೇಖೆಗಳಿದ್ದು ಮೊದಲನೆಯ ರೇಖೆಯಲ್ಲಿ ಅಣಿಮಾ, ಗರಿಮಾ, ಲಘಿಮಾ, ಮಹಿಮಾ, ಈಶಿತ್ವ, ವಶಿತ್ವ, ಪ್ರಾಪ್ತಿ, ಪ್ರಾಕಾಮ್ಯಗಳು ಎಂಬ ಅಷ್ಟ ಸಿದ್ಧಿಗಳಿವೆ.
   ಎರಡನೆಯ ರೇಖೆಯಲ್ಲಿ ಅಷ್ಟ ಮಾತೃಕೆಯರಾದ ಬ್ರಾಹ್ಮಿ, ಮಾಹೇಶ್ವರಿ, ಕೌಮಾ
   ಮೂರನೆಯ ರೇಖೆಯಲ್ಲಿ ಸರ್ವಸಂಕ್ಷೋಭಿಣಿ, ಸರ್ವವಿದ್ರಾವಿಣಿ, ಸರ್ವಾಕರ್ಷಿಣಿ, ಸರ್ವವಶಂಕರಿ, ಸರ್ವೋನ್ಮಾದಿನಿ, ಸರ್ವಮಹಾಂಕುಶೇ, ಸರ್ವಖೇಚರಿ, ಸರ್ವಬೀಜೇ, ಸರ್ವಯೋನಿ, ಸರ್ವತ್ರಿಖಂಡೇ ಎಂಬ ದಶಮುದ್ರಾ ದೇವತೆಗಳಿದ್ದಾರೆ.
   ಕೃತಿಯ ಮೊದಲಿಗೆ ಬರುವ ಶ್ರೀಹೃತ್ ಕಮಲಾನಗರ ನಿವಾಸಿನಿ ಎಂಬ ಸಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಚಾಮುಂಡಿ, ನಾರಸಿಂಹಿಯರಿದ್ದಾರೆ.ಲು ದೀಕ್ಷಿತರು ಕಮಲಾಂಬೆಯು ನನ್ನ ಹೃದಯವೆಂಬ ಕಮಲಾನಗರದಲ್ಲಿ ವಾಸಿಸುತ್ತಿದ್ದಾಳೆಯೆಂದು ಹೇಳುವಂತಿದೆ. ಚರಣದಲ್ಲಿ ಅಣಿಮಾದಿ ಅಷ್ಟಸಿದ್ಧಿಗಳ ಒಡೆಯಳು ನಿತ್ಯಕಾಮೇಶ್ವರಿ ಎಂದಿದೆ.  ಇದು ಲಲಿತಾ ಸಹಸ್ರನಾಮದ 391ನೇ ನಾಮ ನಿತ್ಯಷೋಡಶಿಕಾರೂಪಾ ಪ್ರತಿರೂಪದಂತಿದೆ.
{ನಿತ್ಯಷೋಡಶಿಕಾರೂಪಾ (16ಮಂದಿ ನಿತ್ಯೆಯರು) : ಕಾಮೇಶ್ವರೀ, ಭಗಮಾಲಿನಿ, ನಿತ್ಯಕ್ಲಿನ್ನಾ, ಭೇರುಂಡಾ, ವಹ್ನಿವಾಸಿನೀ, ಮಹಾವಜ್ರೇಶ್ವರಿ ಅಥವಾ ಮಹಾ ವಿದ್ಯೇಶ್ವರೀ, ಶಿವದೂತಿ, ತ್ವರಿತಾ, ಕುಲಸುಂದರೀ, ನಿತ್ಯಾ, ನೀಲಪತಾಕಿನೀ, ವಿಜಯಾ, ಸರ್ವಮಂಗಲಾ, ಜ್ವಾಲಾಮಾಲಿನೀ, ಚಿತ್ರಾ, ತ್ರಿಪುರಸುಂದರೀ ಇವರು ಹದಿನಾರು ನಿತ್ಯೆಯರು. ಮೊದಲಿನವಳಾದ ಕಾಮೇಶ್ವರಿಯ ಅಂಗಗಳೆಂದು ಉಳಿದ ಹದಿನೈದು ಮಂದಿ ನಿತ್ಯೆಯರು ಪ್ರಸಿದ್ಧರು.}
ಇಡಿ ಕೃತಿಯನ್ನು ಗಮನಿಸಿದಾಗ ದೀಕ್ಷಿತರು ಕಮಲಾಂಬೆಯನ್ನು ತ್ರಿಪುರಾ, ತ್ರಿಪುರೇಶಿ, ತ್ರಿಪುರ ಭಂಜನ ನಿರಂಜನಿ, ತ್ರಿಪುರ ಸುಂದರಿ ಎಂದು ಮನಃಪೂರ್ವಕವಾಗಿ ಬೇಡಿದ್ದಾರೆ ಅನಿಸುತ್ತದೆ. ತ್ರಿಪುರಾ (ಲಲಿತಾಸಹಸ್ರನಾಮದ 626ನೆ ನಾಮ ತ್ರಿಪುರಾ)  ಎಂದರೆ ತ್ರಿಮೂರ್ತಿಗಳಿಗಿಂತಲೂ ಪುರಾತನಳಾದವಳು ಎಂದರ್ಥ ಬರುತ್ತದೆ. ತ್ರ್ರಿಪುರ ಎಂದರೆ ಸುಷಮ್ನಾ, ಇಡಾ, ಪಿಂಗಲಾ ಎಂಬ ಮೂರು ಬಗೆಯ ನಾಡಿಗಳು. ದೇವಿಯು ಇದರಲ್ಲಿ ಆವಾಸಳಾಗಿರುವುದರಿಂದ ತ್ರಿಪುರಾವೆಂದೆನಿಸಿಕೊಂಡಿದ್ದಾಳೆ.
   ನಾಡೀತ್ರಯಂ ತ್ರಿಪುರಾ ಸುಷಮ್ನಾ ಪಿಂಗಲಾ ಇಡಾ | 
   ಮನೋ ಬುದ್ಧಿಸ್ತಥಾ ಚಿತ್ತಂ ಪ್ಮರತ್ರಯಮುದಾಹೃತಮ್ |
   ತತ್ರ ತತ್ರ ವಸತ್ಯೇಷಾ ತಸ್ಮ್ಮಾತ್ತು ತ್ರಿಪುರಾ ಮತಾ || 
ಎಂದು ತ್ರ್ರಿಪುರಾರ್ಣವದಲ್ಲಿ ಹೇಳಿದೆ. ಅವಳ ಮಂಡಲವು ತ್ರಿಕೋಣ. “ಸರ್ವಂ ತ್ರಯಂ ತ್ರಯಂ ಯಸ್ಮಾತ್ತಸ್ಮಾತ್ತು ತ್ರಿಪುರಾ ಮತಾ” ಎಲ್ಲವೂ ಮೂರು ಮೂರು ಆಗಿರುವುದರಿಂದ ತ್ರಿಪುರಾ ಎಂದೆನಿಸಿಕೊಂಡಿದ್ದಾಳೆ.
               …………………………………………………………………………………………………………………………………………

Sunday, 11 October 2015

ಶ್ರೀ ಮುತ್ತುಸ್ವಾಮಿ ದೀಕ್ಷಿತರು ಕಂಡ ಕೈಲಾಸನಾಥ ಪರಮೇಶ್ವರ

    ಶ್ರೀ ಮುತ್ತುಸ್ವಾಮಿ ದೀಕ್ಷಿತರು ಕಂಡ ಕೈಲಾಸನಾಥ ಪರಮೇಶ್ವರ 
                ಸಂಗೀತವೆನ್ನುವುದು ಕೇವಲ ಮನೋರಂಜನೆಗಾಗಿ, ದೈಹಿಕ ಅಥವಾ ಮಾನಸಿಕ ಶಾಂತಿ, ತೃಪ್ತಿಗಾಗಿ ಮಾತ್ರ ಇರುವಂತಹದು ಎನ್ನುವುದು ತಪ್ಪು ಕಲ್ಪನೆ. ಭಗವಂತನ ಸಾಕ್ಷಾತ್ಕಾರಕ್ಕೆ ಪೂಜೆ, ಜಪ, ತಪಸ್ಸು, ಧ್ಯಾನದಂತೆ ಸಂಗೀತವೂ ಒಂದು ಸಾಧನ. ಈ ರೀತಿ ನಾದಸಾಧನೆಯ ಮೂಲಕ ಭಗವಂತನ ನಾಮಸಂಕೀರ್ತನೆಯನ್ನು ಮಾಡಬಹುದೆಂಬ ಮಾರ್ಗೋಪಾಯವನ್ನು ಈ ಹಿಂದೆ ಬದುಕಿ ಬಾಳಿದ ಈಗ ಕೀರ್ತಿಶೇಷರಾಗಿರುವ ಹಲವಾರು ನಾದೋಪಾಸಕರು ತಮ್ಮ ಕೃತಿಗಳ ಮೂಲಕ ಶ್ರುತಪಡಿಸಿದ್ದಾರೆ.
                ಅಂಥಹ ನಾದೋಪಾಸಕರಲ್ಲಿ ಸುಮಾರು ಹದಿನೆಂಟನೇ ಶತಮಾನದಲ್ಲಿ ಬಾಳಿ ಬದುಕಿದ ಕರ್ನಾಟಕ ಸಂಗೀತ ತ್ರಿಮೂರ್ತಿಗಳೊಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರೂ ಒಬ್ಬರು. ಮಹಾನ್ ವಿರಕ್ತರೂ, ಎಂದೂ ನರಮನುಷ್ಯರನ್ನು ಸ್ತುತಿಮಾಡದವರಾದ ದೀಕ್ಷಿತರು ಭಗವದ್ಭಕ್ತಿಯಲ್ಲಿಯೇ ಸಾಯುಜ್ಯ ಕಂಡವರು. ದೀಕ್ಷಿತರು ತಮ್ಮ ನಿತ್ಯಪೂಜೆಗೆ ಉಪಯೋಗಿ ಸುತ್ತಿದ್ದುದು ಸೋಮಾಸ್ಕಂದಪಾರ್ವತೀ ಮೂರ್ತಿಯನ್ನು ಅಂದರೆ ಈಶ್ವರ-ಸುಬ್ರಹ್ಮಣ್ಯನ ಸಮೇತ ಪಾರ್ವತೀ ವಿಗ್ರಹವನ್ನು ಹಾಗೆಯೇ ಇವರ ಇಷ್ಟದೈವ ಸುಬ್ರಹ್ಮಣ್ಯಸ್ವಾಮಿ. ಆದರೂ  ಯಾವೂದೇ ಬೇಧ-ಭಾವವಿಲ್ಲದೇ ಎಲ್ಲಾ ದೇವಾನುದೇವತೆಯರ ಕುರಿತು ಕೃತಿ ರಚಿಸಿದ್ದಾರೆ. ಸಂಖ್ಯೆಯ ಲೆಕ್ಕ ದಲ್ಲಿ ನೋಡಿದರೆ ಅತೀ ಹೆಚ್ಚು ಕೃತಿ ರಚಿಸಿದ್ದು ಶಿವ-ಶಕ್ತಿಯರ ಕುರಿತು. ಜಗದ ಆದಿದಂಪತಿಗಳು, ಜಗನ್ಮಾತಾ-ಪಿತರೂ ಆಗಿರುವ ಪಾರ್ವತೀ ಪರಮೇಶ್ವರರನ್ನು ಸಾಂಕೇತಿಕವಾಗಿ ಪಕೃತಿ-ಪುರುಷ ರೂಪದಲ್ಲಿ ನೋಡುವ ದೃಷ್ಟಿಕೋನ ನಮ್ಮಲ್ಲಿ ಚಾಲ್ತಿಯಲ್ಲಿದೆ. ದೀಕ್ಷಿತರ ಶಿವ-ಶಕ್ತಿಯರ ಕುರಿತ ಕೃತಿಗಳ ಲೆಕ್ಕಾಚಾರವನ್ನು ನೋಡಿದರೆ ಪ್ರಕೃತಿ ಪುರುಷರ ಸಮ್ಮಿಲನ ವಾದಂತೆ ಕಾಣುತ್ತದೆ. ಪ್ರಕೃತಿಗೆ ಮೊದಲಸ್ಥಾನ(ತಾಯಿಗೆ ಮೊದಲ ಪ್ರಾಶಸ್ತ್ಯ) ದೀಕ್ಷಿತರು ರಚಿಸಿದ ದೇವಿಕೃತಿಗಳು ಸುಮಾರು 169. ಪುರುಷನಿಗೆ ನಂತರದ ಸ್ಥಾನ(ತಂದೆಯ ಸ್ಥಾನ ನಂತರದ್ದು) ದೀಕ್ಷಿತರ ಶಿವಪರ ಕೃತಿಗಳು ಸುಮಾರು 130.

                   ಶ್ರೀ ತಿರುವಣ್ಣಾಮಲೈ ಅರುಣಾಚಲನಾಥಂ ಲಿಂಗಂ


                ಇರಲಿ ಈಗ ನಾವು ದೀಕ್ಷಿತರ ಶಿವಪರ ಕೃತಿಗಳನ್ನು ನೋಡಿದರೆ, ಸಾಕ್ಷಾತ್ ಮಹಾದೇವನೇ ಅವರ ಕೃತಿಗಳ ಮೂಲಕ ತಾಂಡವವಾಡುತ್ತಿದ್ದಾನೆಯೋ ಎಂಬಂತೆ ಭಾಸವಾಗುತ್ತದೆ. ಇಲ್ಲಿ ಭಕ್ತಿಯು ತುಂಬು ನಾದವಾಹಿನಿ ಯಾಗಿ ದೀಕ್ಷಿತರ ಕೃತಿಗಳ ಮೂಲಕ ಹರಿಯುವ ಕಲ್ಪನೆ ಮೂಡುತ್ತದೆ. ಒಂದೊಂದು ಕೃತಿಗಳಲ್ಲಿಯೂ ಲಿಂಗಸ್ವರೂಪಿಯಾದ ಮಹಾದೇವನ ವಿವಿಧ ಚಿತ್ರಣಗಳನ್ನು ಕೊಡುತ್ತಾರೆ. ತದೇಕಚಿತ್ತದಿಂದ ದೀಕ್ಷಿತರ ಶಿವಪರ ಕೃತಿಯನ್ನು ಆಲಿಸಿದರೆ ನಮ್ಮನ್ನು ನಾವು ಮರೆತು ಧ್ಯಾನಸ್ಥಸ್ಥಿತಿಗೆ ಕೊಂಡೊಯ್ಯುವುದರಲ್ಲಿ ಯಾವ ಅನುಮಾನವೂ ಇಲ್ಲ.
                ದೀಕ್ಷಿತರ ಶಿವಪರ ಕೃತಿಗಳಲ್ಲಿ ವಿಶೇಷವೆನಿಸಿದವು ಶ್ರೀತ್ಯಾಗರಾಜ ವಿಭಕ್ತಿ ಕೃತಿಗಳು, ಪಂಚಭೂತ ಲಿಂಗ ಕೃತಿಗಳು, ತಿರುವಾರೂರು ಪಂಚಲಿಂಗ ಕೃತಿಗಳು ಪ್ರಮುಖವಾದವು.
1 ಶ್ರೀ ತ್ಯಾಗರಾಜ ವಿಭಕ್ತಿ ಕೃತಿಗಳು :
       ಈ ಕೃತಿಗುಚ್ಛವನ್ನು ಶಿವನವಾವರಣ ಕೃತಿಗಳೆಂದೂ ಕರೆಯುತ್ತಾರೆ. ತಿರೂವಾರೂರಿನ ತ್ಯಾಗರಾಜಸ್ವಾಮಿ(ಶಿವ)ಯನ್ನು ಕುರಿತ ಸ್ತುತಿಗೀತಗಳೇ ತ್ಯಾಗರಾಜ ವಿಭಕ್ತಿ ಕೃತಿಗಳು. ದೀಕ್ಷಿತರು ಈ ಕೃತಿಗಳನ್ನು ವಿಭಕ್ತಿಕೃತಿಗಳೆಂದು ಹೆಸರಿಸಿ ಸಮುದಾಯ ಕೃತಿ(ಗುಂಪು ಕೃತಿ)ಯಾಗಿಸಿ ರಚಿಸಿದ್ದಾರೆ.  ಸಂಸ್ಕøತ ಭೂಯಿಷ್ಟವಾದ ಶ್ರೀತ್ಯಾಗರಾಜ ವಿಭಕ್ತಿ ಕೃತಿಗಳು ದೀಕ್ಷಿತರ ಇತರ ಶಿವಪರ ಕೃತಿಗಳಿಗಿಂತ ಕ್ಲಿಷ್ಟಶೈಲಿಯಲ್ಲಿವೆ. ಆದರೂ ಇಲ್ಲಿಯ ಅಲಂಕಾರ, ಆದಿ-ಅಂತ್ಯ ಪ್ರಾಸಗಳು, ಉತ್ಕøಷ್ಟವಾದ ಪದಪುಂಜಗಳನ್ನು ಬಳಸಿ ರಚಿಸಿದ ರಚನಾ ಕೌಶಲ್ಯ ಹಾಗೂ ಅತೀ ಮುಖ್ಯವಾಗಿ ಪರಮೇಶ್ವರನ ಗಂಭೀರ ಭಾವಕ್ಕೆ ಸರಿಯಾಗಿ ಇಲ್ಲಿಯ ಕೃತಿಗಳಲ್ಲಿ ಮಡುಗಟ್ಟಿದಂತಿರುವ ಘನಗಂಭೀರ ಛಾಯೆ, ಸಾಹಿತ್ಯದ ಬಿಗಿ, ಸಂಗೀತದ ನಿಕಟತೆ, ಭಕ್ತಿಯ ಗಾಢಭಾವ ವಂತೂ ವಿದ್ವದ್‍ರಸಿಕರ ಮನಮುಟ್ಟುವಂತಿದೆ. ಆದರೂ ಈ ಕೃತಿಗಳು ಕಛೇರಿಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿ ಇಲ್ಲ ಎನ್ನುವುದೇ ವಿಷಾದನೀಯ. ಶ್ರೀತ್ಯಾಗರಾಜ ವಿಭಕ್ತಿ ಕೃತಿಗಳ ವಿವರ ಇಂತಿವೆ.






ಪ್ರಥಮ ವಿಭಕ್ತಿ ಕೃತಿ
ತ್ಯಾಗರಾಜೋ ವಿರಾಜತೇ
ಅಠಾಣ
ರೂಪಕ ತಾಳ 
ದ್ವಿತೀಯ ವಿಭಕ್ತಿ ಕೃತಿ
ತ್ಯಾಗರಾಜಂ ಭಜರೇರೇ ಚಿತ್ತ
ಯದುಕುಲ ಕಾಂಭೋಜಿ
ಛಾಪು ತಾಳ
ತೃತೀಯ ವಿಭಕ್ತಿ ಕೃತಿ
ತ್ಯಾಗರಾಜೇನ ಸಂರಕ್ಷಿತೋಹಂ
ಸಾಳಗ ಭೈರವಿ
ಆದಿತಾಳ
ಚತುರ್ಥ ವಿಭಕ್ತಿ ಕೃತಿ
ತ್ಯಾಗರಾಜಾಯ ನಮಸ್ತೇ ನಮಸ್ತೇ
ಬೇಗಡೆ
ರೂಪಕ ತಾಳ 
ಪಂಚಮಿ ವಿಭಕ್ತಿ ಕೃತಿ
ತ್ಯಾಗರಾಜಾದನ್ಯಂ ನಜಾನೇ
ದರ್ಬಾರ್
ಆದಿತಾಳ
ಷಷ್ಠಿ ವಿಭಕ್ತಿ ಕೃತಿ
ತ್ಯಾಗರಾಜಸ್ಯ ಭಕ್ತೋಭವಾಮಿ
ರುದ್ರಪ್ರಿಯ
ಛಾಪು ತಾಳ
ಸಪ್ತಮಿ ವಿಭಕ್ತಿ ಕೃತಿ
ತ್ಯಾಗರಾಜೇ ಕೃತ್ಯಾಕೃತ್ಯಮರ್ಪಯಾಮಿ
ಸಾರಂಗ
ಝಂಪೆ ತಾಳ
ಸಂಭೋದನಾ ವಿಭಕ್ತಿ ಕೃತಿ
ವೀರವಸಂತ ತ್ಯಾಗರಾಜ
ವೀರವಸಂತ
ಆದಿತಾಳ


                ಶ್ರೀ ಚಿದಂಬರಪುರಂ ಚಿದಂಬರಪುರೀಶ್ವರಂ(ನಟರಾಜ) ಲಿಂಗಂ s


ಈ ಮೇಲಿನ ಕೃತಿಗಳಲ್ಲದೆ ಶ್ರೀತ್ಯಾಗರಾಜ ಸ್ವಾಮಿಯನ್ನು ಕುರಿತು ಶ್ರೀರಾಗ (ಆದಿತಾಳ)ದಲ್ಲಿ ‘ತ್ಯಾಗರಾಜ ಮಹಧ್ವಜರೋಹ’ , ನೀಲಾಂಬರಿ ರಾಗ(ರೂಪಕ ತಾಳ)ದಲ್ಲಿ ‘ತ್ಯಾಗರಾಜಂ ಭಜೇಹಂ ಸತತಂ’ , ರುದ್ರಪ್ರಿಯ ರಾಗ(ಆದಿ ತಾಳ)ದಲ್ಲಿ ‘ತ್ಯಾಗೇಶಂ ಭಜರೇ ರೇಮಾನಸ’ , ಗೌಳ ರಾಗ(ಆದಿತಾಳ)ದಲ್ಲಿ ‘ತ್ಯಾಗರಾಜ ಪಾಲಯಶು ಮಾಂ’ , ಆನಂದ ಭೈರವಿ ರಾಗ(ರೂಪಕ ತಾಳ)ದಲ್ಲಿ ‘ತ್ಯಾಗರಾಜ ಯೋಗವೈಭವಂ ಸದಾಶಿವಂ’  ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
                      ಸಂಗೀತದಷ್ಟೇ ಸಾಹಿತ್ಯವನ್ನು ಪೋಷಿಸುವುದು ದೀಕ್ಷಿತರ ಪರಿಪಾಠ. ಇದನ್ನು ದೀಕ್ಷಿತರ ಹೆಚ್ಚಿನ ಕೃತಿಗಳಲ್ಲಿ ಕಾಣಬಹುದು. ಉದಾ: ತ್ಯಾಗಾರಾಜ ಯೋಗ ವೈಭವಂ(ಆನಂದ ಭೈರವಿ ರಾಗ) ಕೃತಿಯಲ್ಲಿ ಗೋಪುಚ್ಛ ಮತ್ತು ಶ್ರೋತೋವಾಹ ಅಲಂಕಾರಗಳನ್ನು ಬಳಸಿದ್ದಾರೆ. ಗೋಪುಚ್ಛಯತಿಯಲ್ಲಿ ಅಕ್ಷರಗಳು ಏಕಪ್ರಕಾರವಾಗಿ ಕಡಿಮೆಯಾಗುತ್ತಾ ಬರುತ್ತದೆ.  ಪಲ್ಲವಿಯ ಸಾಹಿತ್ಯ ಇಂತಿವೆ:-
ತ್ಯಾಗರಾಜ ಯೋಗ ವೈಭವಂ , ಅಗರಾಜ ಯೋಗ ವೈಭವಂ , ರಾಜ ಯೋಗ ವೈಭವಂ , ಯೋಗ ವೈಭವಂ , ವೈಭವಂ , ಭವಂ , ವಂ                                                                                      ಅದೇ ಕೃತಿಯ ಚರಣದಲ್ಲಿರುವ ಶ್ರೋತೋವಾಹ ಯತಿ ಪ್ರಯೋಗದಲ್ಲಿ ಅಕ್ಷರಗಳು ಕ್ರಮವಾಗಿ ಹೆಚ್ಚಾಗುತ್ತಾ ಹೋಗುತ್ತದೆ. ಆ ಸಾಲುಗಳು ಇಂತಿವೆ: -
ಶಂ , ಪ್ರಕಾಶಂ , ಸ್ವರೂಪ ಪ್ರಕಾಶಂ , ತತ್ವಸ್ವರೂಪ ಪ್ರಕಾಶಂ , ಸಕಲ ತತ್ವಸ್ವರೂಪ ಪ್ರಕಾಶಂ , ಶಕ್ತ್ಯಾದಿ ಸಕಲ ತತ್ವ ಸ್ವರೂಪ ಪ್ರಕಾಶಂ , ಶಿವ ಶಕ್ತ್ಯಾದಿ ಸಕಲ ತತ್ವಸ್ವರೂಪ ಪ್ರಕಾಶಂ
ಹೀಗೆ ದೀಕ್ಷಿತರು ಯಾವುದೇ ಕೃತಿ ರಚಿಸಿದಾಗಲೂ ಏನಾದರೊಂದು ಯೋಜನೆ ಅಥವಾ ವಿಶೇಷವೊಂದು ಇರುತ್ತದೆ. ಹಾಗಾಗಿಯೇ ಏನೋ ಕಲಾರಸಿಕರು ಹೇಳುವುದುಂಟು ದೀಕ್ಷಿತರ ಕೃತಿಗಳು ಪಾಮರರಿಗಲ್ಲ ಪಂಡಿತರಿಗೆ. ಆದರೆ ದೀಕ್ಷಿತರು ಇದ್ಯಾವುದರ ಪರಿವಿಲ್ಲದೆ ದೃಢಭಕ್ತಿಯಿಂದ ಕೃತಿ ರಚಿಸಿದ್ದು ಕೃತಿಗಳಲ್ಲಿ ಅಡಗಿರುವ ಗಾಢಭಕ್ತಿ ಭಾವದಿಂದ ಎದ್ದು ಕಾಣುತ್ತದೆ.

                  ಶ್ರೀ ತಿರುವನೈಕಾವಲ್ ಜಂಬುಕೇಶ್ವರಂ ಲಿಂಗಂ
2 ಪಂಚಭೂತ ಲಿಂಗ ಕೃತಿಗಳು :
                   ಶಿವನನ್ನು ಭೂತಗಳ ಅಧಿಪತಿ ಎನ್ನುವುದುಂಟು. ಹಾಗೆಯೇ ಪಂಚಭೂತಗಳು ಅವನ ಅಧೀನಕ್ಕೊಳಪಟ್ಟವು. ಹಾಗಾಗಿಯೇ ತಿಳಿದವರು ಹೇಳುವುದುಂಟು ಈ ಜಗವು ಶಿವಮಯವು ಎಂದು. ಈ ಒಂದು ತತ್ವವನ್ನು ಪ್ರತಿಪಾದಿಸುವ ಐದುಲಿಂಗಗಳೇ ಕಾಂಚೀಪುರದಲ್ಲಿರುವ ಪೃಥ್ವೀಲಿಂಗ , ತಿರುವನೈ ಕಾವಲ್‍ನಲ್ಲಿರುವ ಅಪ್ಪು(ಜಲ)ಲಿಂಗ , ತಿರುವಣ್ಣಾಮಲೈಯಲ್ಲಿರುವ ತೇಜೋ(ಅಗ್ನಿ)ಲಿಂಗ , ಕಾಳಹಸ್ತಿಲ್ಲಿರುವ ವಾಯುಲಿಂಗ, ಚಿದಂಬರಂನಲ್ಲಿರುವ ಆಕಾಶ ಲಿಂಗ ಹೀಗೆ ಈ ಐದು ಲಿಂಗಗಳನ್ನು ಸ್ತುತಿಸಿ ದೀಕ್ಷಿತರು ರಚಸಿದ ಕೃತಿಗಳೇ ಪಂಚಭೂತಲಿಂಗಸ್ಥಳ ಕೃತಿಗಳು. ಈ ಕೃತಿಗಳಲ್ಲಿ ವಿಶೇಷವಾಗಿ ಲಿಂಗಮುದ್ರೆ, ಕ್ಷೇತ್ರಮುದ್ರೆ, ರಾಗಮುದ್ರೆ ಹಾಗೂ ವಾಗ್ಗೇಯಕಾರ ಮುದ್ರೆಗಳನ್ನು ಜಾಣ್ಮೆಯಿಂದ ಕೃತಿಯಲ್ಲಿ ಪೋಣಿಸಿದ್ದು ದೀಕ್ಷಿತರ ಸಾಹಿತ್ಯ ಪ್ರೌಢಿಮೆಗೆ ಮತ್ತು ಪೂರ್ವಯೋಜನಾ ಕೌಶಲ್ಯಕ್ಕೆ ಸಾಕ್ಷಿ.
ಪಂಚಲಿಂಗಸ್ಥಳ ಕೃತಿಗಳು ಇಂತಿವೆ:-

      ಕೃತಿ
 ರಾಗ
 ತಾಳ

     ಕ್ಷೇತ್ರ ಮುದ್ರೆ
ಲಿಂಗ ಮುದ್ರೆ
ಜಂಬೂಪತೇ ಮಾಂ ಪಾಹಿ
ಯಮನ್ ಕಲ್ಯಾಣಿÂ
ರೂಪಕ
ತಿರುವನೈಕಾವಲ್ ಜಂಬುಕೇಶ್ವರ
ಅಪ್ಪು ಲಿಂಗಂ
ಅರುಣಾಚಲನಾಥಂ ಸ್ಮರಾಮಿ
ಸಾರಂಗ
ರೂಪಕ
ತಿರುವಣ್ಣಾಮಲೈ ಅರುಣಾಚಲನಾಥ
ತೇಜೊ ಲಿಂಗಂ
ಶ್ರೀ ಕಾಳಹಸ್ತೀಶ ಶ್ರಿತಜನಾವನ
ಹುಸೇನಿ
ಝಂಪೆ
ಕಾಳಹಸ್ತಿ ಶ್ರೀಕಾಳಹಸ್ತೀಶ್ವರ
ವಾಯು ಲಿಂಗ
ಆನಂದ ನಟನ ಪ್ರಕಾಶಂ
ಕೇದಾರ
ಛಾಪು
ಚಿದಂಬರಂ ನಟರಾಜ
ಆಕಾಶ ಲಿಂಗಂ
ಚಿಂತಯ ಮಾಕಂದ ಮೂಲಕಂದ
ಭೈರವಿ
ರೂಪಕ
ಕಾಂಚಿಪುರಂ ಏಕಾಮ್ರನಾಥ
ಪ್ರಥ್ವೀ ಲಿಂಗ

3 ತಿರುವಾರೂರು ಪಂಚಲಿಂಗ ಕೃತಿಗಳು :-
                         ದೀಕ್ಷಿತರ ತಿರುವಾರೂರಿನ ಶ್ರೀತ್ಯಾಗರಾಜ ಸ್ವಾಮಿಯ ಕೃತಿಗಳ ಬಗ್ಗೆ ಈ ಮೇಲೆ ನೋಡಿದ್ದೇವೆ. ಈಗ ಅದೇ ದೇವಾಸ್ಥಾನದ ಪ್ರಾಕಾರದೊಳಗಿರುವ ಐದು ಗುಡಿಯಲ್ಲಿರುವ ಶಿವಲಿಂಗದ ಬಗ್ಗೆ ದೀಕ್ಷಿತರು ರಚಿಸಿರುವ ಕೃತಿಗಳನ್ನು ನೋಡೋಣ.

ಸದಾಚಲೇಶ್ವರಂ ಭಾವಯೇಹಂ
ಭೂಪಾಳ
ಆದಿತಾಳ
ಅಚಲೇಶ್ವರಂ
ಹಾಟಕೇಶ್ವರ ಸಂರಕ್ಷಮಾಂ
ಬಿಲಹರಿ
ರೂಪಕತಾಳ
ಹಾಟಕೇಶ್ವರಂ
ಶ್ರೀ ವಲ್ಮೀಕಲಿಂಗಂ ಚಿಂತಯೇ
ಕಾಂಭೋಜಿ
ಅಟತಾಳ
ವಲ್ಮೀಕೇಶ್ವರಂ
ಆನಂದೇಶ್ವರೇಣ ಸಂರಕ್ಷಿತೋಹಂ
ಆನಂದ ಭೈರವಿ
ಛಾಪುತಾಳ
ಆನಂದೇಶ್ವರಂ
ಸಿದ್ಧೇಶ್ವರರಾ ನಮಸ್ತೇ
ನೀಲಾಂಬರಿ
ಛಾಪುತಾಳ
ಸಿದ್ಧೇಶ್ವರಂ

                     ಶ್ರೀ ಕಾಂಚೀಪುರಂ ಏಕಾಮ್ರೇಶ್ವರಂ ಲಿಂಗಂ


ದೀಕ್ಷಿತರ ಇತರ ಕ್ಷೇತ್ರ ಕೃತಿಗಳು ಹಾಗೂ ಶಿವಪರ ಕೃತಿಗಳು ಇಂತಿವೆ :-
ತಂಜಾವೂರಿನ ಬೃಹದೀಶ್ವರ ಕುರಿತು 9ಕೃತಿಗಳು, ಕಾಶಿ ವಿಶ್ವೇಶ್ವರನ ಕುರಿತು 5ಕೃತಿಗಳು, ಮಧುರೈ ಸುಂದರೇಶ್ವರನ ಕುರಿತು 6 ಕೃತಿಗಳು, ಕಾಂಚೀಪುರದ ಏಕಾಮ್ರನಾಥನ ಕುರಿತು 5ಕೃತಿಗಳು,  ಶ್ರೀನಗರದ ನಾಗಲಿಂಗನ ಕುರಿತು 2ಕೃತಿಗಳು, ಮಧ್ಯಾರ್ಜುನದ ಮಹಾಲಿಂಗನ ಕುರಿತು 2ಕೃತಿಗಳು, ನೇಪಾಳದ ಪಶುಪತಿನಾಥನ ಕುರಿತು 1ಕೃತಿ, ಇದಲ್ಲದೆ ಶ್ರೀ ದಕ್ಷಿಣಾಮೂರ್ತಿ, ಶ್ರೀವಟುಕನಾಥ, ನೀಲಕಂಠ, ನೀಲಾಚಲ ನಾಥ, ವೇದಾರಣ್ಯೇಶ್ವರ, ಮರಕತಲಿಂಗ, ಗೋಕರ್ಣೇಶ್ವರ, ಅಗಸ್ತೀಶ್ವರ, ಶಾಲಿವಾಟೀಶ್ವರ, ಮಾರ್ಗಸಹಾಯೇಶ್ವರ , ಅರ್ಧನಾರೀಶ್ವರ, ಶೈಲೇಶ್ವರ, ಶ್ರೀವೈದ್ಯನಾಥ ಮುಂತಾದ ಶಿವಲಿಂಗದ ಕುರಿತು ಕೃತಿರಚಿಸಿದ್ದಾರೆ. ಇದಲ್ಲದೆ ಕಾಶಿಯ ಕ್ಷೇತ್ರಪಾಲ ಕಾಲಭೈರವನ ಕುರಿತು ಭೈರವರಾಗದಲ್ಲಿ ಕೃತಿ ರಚಿಸಿದ್ದಾರೆ. ಹೀಗೆ ದೀಕ್ಷಿತರು ರಚಿಸಿದ ಶಿವಪರ ಕೃತಿಗಳ ಸಂಖ್ಯೆ ಸುಮಾರು 130.
ದೀಕ್ಷಿತರ ಶಿವಪರ ಕೃತಿಗಳು ಮತ್ತು ರಾಗಗಳು:-
                          ಇನ್ನು ದೀಕ್ಷಿತರ ಶಿವಪರ ಕೃತಿಗಳ ರಾಗಗಳನ್ನು ನೋಡಿದರೆ ಅತೀ ಹೆಚ್ಚಾಗಿ ಬಳಕೆಯಾದ ರಾಗ ಶಂಕರಾಭರಣ. ಈ ರಾಗದಲ್ಲಿ ದೀಕ್ಷಿತರು ಸುಮಾರು 13ಶಿವನ ಕೃತಿಗಳನ್ನು ರಚಿಸಿದ್ದಾರೆ. ಹಾಗೆಯೇ ಜನ್ಯರಾಗಗಳಲ್ಲಿ ಅತಿ ಹೆಚ್ಚಿನ ರಾಗಗಳು ಶಂಕರಾಭರಣ ರಾಗದಿಂದ ಜನಿತಗೊಂಡವು, ಅಂದರೆ ಸುಮಾರು ಸರಿ ಸುಮಾರು 15ರಾಗಗಳು ಶಂಕರಾಭರಣ ರಾಗದ ಜನ್ಯರಾಗಗಳು.  ಈ ನಿಟ್ಟಿನಲ್ಲಿ ನೋಡಿದರೆ ದೀಕ್ಷಿತರು ಶಿವಕೃತಿಗಳಿಗೆ ಅತೀ ಹೆಚ್ಚು ಬಳಸಿದ್ದು ಶಂಕರಾಭರಣ ರಾಗ.  ಇನ್ನು ಉಳಿದಂತೆ ಶಿವನಿಗೆ ಹತ್ತಿರವಾದ ರಾಗಗಳೆಂದರೆ ಕೇದಾರ ಮತ್ತು ರುದ್ರಪ್ರಿಯ ರಾಗಗಳಲ್ಲಿ ತಲಾ ಎರಡೆರಡು ಕೃತಿಗಳನ್ನು ರಚಿಸಿದ್ದಾರೆ. ಇನ್ನು ಆನಂದ ಭೈರವಿ, ಕಾಂಭೋಜಿ, ದೇವಗಾಂಧಾರ,ತೋಡಿ, ಸುರಟಿ,ಭೈರವಿ,ಶ್ರೀರಾಗ,ದರ್ಬಾರ್, ವಸಂತ, ಧನ್ಯಾಸಿ,ಬೇಗಡೆ ಮುಂತಾದ ಜನಪ್ರಿಯ ರಾಗಗಳಲ್ಲದೆ ನಾಗಾಭರಣ,ಭೈರವ, ಶಿವಪಂತುವರಾಳಿ,ಭೂಪಾಳ, ಸಾರಂಗ, ನಾಗಧ್ವನಿ,ನಾರಾಯಣ ದೇಶಾಕ್ಷಿ,ನಿಷಧ,ಜೀವಂತಿಕಾ,ಸಿಂಧುರಾಮಕ್ರಿಯಾ ಹೀಗೆ ಹಲವು ಅಪರೂಪದ ರಾಗಗಳನ್ನು ಬಳಸಿ ಶಿವಪರ ಕೃತಿಗಳನ್ನು ರಚಿಸಿದ್ದಾರೆ.     

                         ಹಾಗೆಯೇ ದೀಕ್ಷಿತರು ಶಿವಪರ ಕೃತಿಗಳಿಗೆ ಬಳಸಿಕೊಂಡ ಜನಕರಾಗಗಳು ಸುಮಾರು ಇಪ್ಪತ್ತು. ಇವುಗಳಲ್ಲಿ ತೋಡಿ ಮತ್ತು ಶಂಕರಾಭರಣ ಸಂಪೂರ್ಣ ಮೇಳ ಪದ್ಧತಿಯಾದರೆ ಮಿಕ್ಕಿ ಉಳಿದ ಹದಿನೆಂಟು ರಾಗಗಳು ಅಸಂಪೂರ್ಣ ಮೇಳ ಪದ್ಧತಿ ಮತ್ತು ವಿವಾದಿ ಮೇಳಗಳಾಗಿವೆ.                                            
                                ಶ್ರೀ ಕಾಳಹಸ್ತೀ ಕಾಳಹಸ್ತೀಶ್ವರಂ ಲಿಂಗಂ
                 
             
ಕ್ಷೇತ್ರಮುದ್ರೆ:-
                          ದೀಕ್ಷಿತರ ಶಿವಕೃತಿಗಳಲ್ಲಿ ಅತೀ ಹೆಚ್ಚಿನವು ಕ್ಷೇತ್ರಕೃತಿಗಳು. ಅಂದರೆ ದೀಕ್ಷಿತರು ತಮ್ಮ ಕ್ಷೇತ್ರ ಪರ್ಯಟನಾ ಸಂಧರ್ಭಗಳಲ್ಲಿ ಹಲವಾರು ಶಿವ ದೇವಾಲಯಗಳನ್ನು ಸಂದರ್ಶಿಸಿದ್ದಾರೆ. ಆ ಸಂದರ್ಭದಲ್ಲಿ ಅಲ್ಲಿಯ ಪ್ರಮುಖ ದೇವತೆಯಾದ ಶಿವನನ್ನು ಕುರಿತು ಕೃತಿ ರಚಿಸುತ್ತಿದ್ದರು. ಕೃತಿ ರಚಿಸುವ ಸಂದರ್ಭದಲ್ಲಿ ಕ್ಷೇತ್ರದ ಹೆಸರನ್ನು ಕೃತಿಯಲ್ಲಿ ಚಾಕಚಕ್ಯತೆಯಿಂದ ಸೇರಿಸುವುದು ದೀಕ್ಷಿತರ ಜಾಣ್ಮೆ. ಇಲ್ಲಿ ಕೆಲವೊಂದು ಕ್ಷೇತ್ರಮುದ್ರೆಗಳಿಗೆ ನಿದರ್ಶನ:-
1 ಪಾಲಯ ಮಾಂ ಬೃಹದೀಶ್ವರ - ನಾಯಕಿರಾಗದ ಕೃತಿಯಲ್ಲಿ , ಚರಣದ ಸಾಲಿನ- ವಿಲಸಿತ ತಂಜಪುರೀಶ್ವರ ಬೃಹನ್ನಾಯಕೀ ಮನೋಹರ ಎಂಬ ಸಾಲಿನಲ್ಲಿ ಕ್ಷೇತ್ರ ಮುದ್ರೆ ಕಾಣಬಹುದು.
2 ಹಾಟಕೇಶ್ವರ ಸಂರಕ್ಷಮಾಂ - ಬಿಲಹರಿ ರಾಗದ ಕೃತಿಯಲ್ಲಿ- ಅನುಪಲ್ಲವಿಯಲ್ಲಿ- ಹಾಟಕಕ್ಷೇತ್ರ ನಿವಾಸ ಹಂಸರೂಪ ಚಿದ್ವಿಲಾಸ ಎಂಬ ಸಾಲಿನಲ್ಲಿ ಕ್ಷೇತ್ರ ಮುದ್ರೆ ಕಾಣಬಹುದು.
3 ಸುಂದರೇಶ್ವರಾಯ ನಮಸ್ತೇ - ಶಂಕರಾಭರಣ ರಾಗದ ಕೃತಿಯಲ್ಲಿ – ಅನುಪಲ್ಲವಿಯಲ್ಲಿ – ಮಂದಸ್ಮಿತಾನನಾಯ ಮಧುರಾಪುರೀನಿಲಯಾಯ – ಎಂಬ ಸಾಲಿನಲ್ಲಿ ಕ್ಷೇತ್ರಮುದ್ರೆ ಕಾಣಬಹುದು.
4 ಏಕಾಮ್ರನಾಥೇಶ್ವರೇಣ ಸಂರಕ್ಷಿತೋಹಂ ಶ್ರೀ ಚತುರಂಗಿಣಿ ರಾಗಚರಣದಲ್ಲಿ – ಕಾಂಚೀಪುರ ವಿಲಸಿತ ಪ್ರಭಾವೇನ ಎಂಬ ಸಾಲಿನಲ್ಲಿ ಕ್ಷೇತ್ರಮುದ್ರೆ ಕಾಣಬಹುದು.
5 ಚಿದಂಬರ ನಟರಾಜ ಮೂರ್ತಿಂ ಚಿಂತಯಾಮ್ಯತನುಕೀರ್ತಿಂ ತನುಕೀರ್ತಿ ರಾಗದ ಕೃತಿಯ ಪಲ್ಲವಿಯು ಪ್ರಾರಂಭವಾಗು ವುದು ಚಿದಂಬರ ಎಂಬ ಕ್ಷೇತ್ರಮುದ್ರೆಯಿಂದಲೇ.
6 ಕಾಶಿ ವಿಶ್ವೇಶ್ವರ ಏಹಿ ಮಾಂ ಪಾಹಿ - ಎಂಬ ಕಾಂಭೋಜಿ ರಾಗದ ಕೃತಿಯೂ ಪಲ್ಲವಿಯಲ್ಲಿಯೇ ಕಾಶಿ ಎಂಬ ಕ್ಷೇತ್ರಮುದ್ರೆಯನ್ನು ಒಳಗೊಂಡಿದೆ.
7 ಚಿಂತಯೇ ಮಹಾಲಿಂಗಮೂರ್ತಿಂ – ಎಂಬ ಫರಜ್ ರಾಗದ ಕೃತಿಯ – ಅನುಪಲ್ಲವಿಯಲ್ಲಿ - ಸತತಂ ಮಧ್ಯಾರ್ಜುನಪುರವಾಸಂ ಎಂಬಲ್ಲಿ ಕ್ಷೇತ್ರ ಮುದ್ರೆ ಕಾಣಸಿಗುತ್ತದೆ.
8 ಪಶುಪತೀಶ್ವರಂ ಪ್ರಣೌಮಿ ಸತತಂ – ಎಂಬ ಶಿವಪಂತುವರಾಳಿ  ರಾಗದ ಕೃತಿಯಲ್ಲಿ – ಅನುಪಲ್ಲವಿಯ ಪಶ್ಚಿಮ ಕಾಶ್ಮೀರ (ನೇಪಾಳ) ರಾಜವಿನುತಂ ಎಂಬ ಸಾಲಿನಲ್ಲಿ ಈ ಕೃತಿಯ ಕ್ಷೇತ್ರಮುದ್ರೆಯನ್ನು ಕಾಣಬಹುದು.
9 ಕಾಯಾ ರೋಹಣೇಶಂ ಭಜರೇರೇ ಮಾನಸಕರ್ನಾಟಕ ದೇವಗಾಂಧಾರ ರಾಗದ ಕೃತಿಯಲ್ಲಿ – ಕಲಿಕಲ್ಮಷಾಪಹಂ ಶಿವರಾಜಧಾನಿ ಕ್ಷೇತ್ರಸ್ಥಿತಂ ಎಂದು ಪಲ್ಲವಿಯಲ್ಲಿಯೇ ಕ್ಷೇತ್ರಮುದ್ರೆಯಿದೆ.
10 ಶ್ರೀವೈದ್ಯನಾಥಂ ಭಜಾಮಿ ಅಠಾಣ ರಾಗದ ಕೃತಿಯಲ್ಲಿ – ಧವಳಿತ ವೈದ್ಯನಾಥಕ್ಷೇತ್ರಂ ಎಂದು ಅನುಪಲ್ಲವಿಯಲ್ಲಿ ಕ್ಷೇತ್ರಮುದ್ರೆಯಿದೆ. ಇದಲ್ಲದೆ ಇನ್ನೂ ಹಲವಾರು ಶಿವಪರಕೃತಿಗಳಲ್ಲಿ ಕ್ಷೇತ್ರಮುದ್ರೆಯನ್ನು ಕಾಣಬಹುದು.
                        ಮುಕ್ಕೋಟಿ ದೇವತೆಗಳು ನಿತ್ಯವೂ ಭಜಿಸುವ ಮುಕ್ಕಣ್ಣನಾದ ಪರಮೇಶ್ವರನನ್ನು ಕುರಿತು ತ್ಯಾಗರಾಜರಾದಿಯಾಗಿ ಮುತ್ತಯ್ಯ ಭಾಗವತರು, ಜಯಚಾಮರಾಜೇಂದ್ರ ಒಡೆಯರ್, ಮೈಸೂರು ವಾಸುದೇವಾಚಾರ್ಯ, ಪಾಪನಾಶಂ ಶಿವನ್ ಮುಂತಾದ ವಾಗ್ಗೇಯಕಾರರುಗಳೆಲ್ಲಾ ತಮ್ಮ ಶಕ್ತ್ಯಾನುಸಾರವಾಗಿ ತಾವು ರಚಿಸಿದ ಕೃತಿಗಳ ಮೂಲಕ ಹಾಡಿಹೊಗಳಿದರೂ,  ದೀಕ್ಷಿತರ ಕೃತಿಗಳು ಈ ಎಲ್ಲಾ ಕೃತಿಕಾರರ ಕೃತಿಗಳಿಗಿಂತ ವಿಭಿನ್ನವಾಗಿಯೂ ವಿಶಿಷ್ಟವಾಗಿಯೂ ನಿಲ್ಲುವ ಸಾಧ್ಯತೆಯನ್ನು ಹೊಂದಿದೆ ಎಂದರೆ ಅತಿಶಯೋಕ್ತಿಯಲ್ಲ. ಬಹಳ ವಿಪರ್ಯಾಸದ ಸಂಗತಿಯೆಂದರೆ ಇಂದು ನಾವು ಕಚೇರಿಗಳಲ್ಲಿ ದೀಕ್ಷಿತರ ಶಿವಪರ ಕೃತಿಗಳನ್ನು ಕೇಳುವುದು ವಿರಳವಾಗಿದೆ. ಕೃತಿಗಳು ಕ್ಲಿಷ್ಟವೆಂದೋ ಅಥವಾ ಇನ್ಯಾವುದೋ ಕಾರಣಕ್ಕಾಗಿ ದೀಕ್ಷಿತರ ಶಿವನ ಕುರಿತ ಕೃತಿಗಳು ತೆರೆಮರೆಗೆ ಸೇರುತ್ತಿವೆ. ಈ ಬಗ್ಗೆ ಇನ್ನಾದರೂ ಯುವಕಲಾವಿದರು ಇಂಥಹ ಅಪರೂಪದ ಕೃತಿಗಳ ಕಡೆಗೆ ಗಮನಹರಿಸಿ, ಕಚೇರಿಗಳಲ್ಲಿ ಪ್ರಸ್ತುತ ಪಡಿಸಿದರೆ ದೀಕ್ಷಿತರ ಶ್ರಮ ಸಾರ್ಥಕವೆಂದೆನಿಸುತ್ತದೆ.
                        
                          || ಶಿವಾರ್ಪಣಮಸ್ತು||

ಆಧಾರ ಗ್ರಂಥಗಳು :                                                                              ಮುತ್ತುಸ್ವಾಮಿ ದೀಕ್ಷಿತರ ಸಾಹಿತ್ಯಮಂಜರಿ – ವಿದ್ವಾನ್ ಮತ್ತೂರು ಶಿವಶಂಕರ ಮೂರ್ತಿ – ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು

ಕರ್ನಾಟಕ ಸಂಗೀತ ಪಾರಿಭಾಷಿಕ ಶಬ್ದಕೋಶ ಭಾಗ 1,2 – ಡಾ ವಿ ಎಸ್ ಸಂಪತ್ಕುಮಾರಾಚಾರ್ಯ - ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ

ಕರ್ನಾಟಕ ಸಂಗೀತಕ್ಕೆ ಶ್ರೀಜಯಚಾಮರಾಜೇಂದ್ರ ಒಡೆಯರ ಕೊಡುಗೆ – ಡಾ ಸುಕನ್ಯಾ ಪ್ರಭಾಕರ್ -  ಡಿ ವಿ ಕೆ ಮೂರ್ತಿ ಪ್ರಕಾಶನ

ಸುರಹೊನ್ನೆ ಬ್ಲಾಗ್‍ನಲ್ಲಿ 2 ಕಂತುಗಳ ಮೂಲಕ 2015 ಜುಲೈ23 ಮತ್ತು 30ರಂದು ಪ್ರಕಟಗೊಂಡಿದೆ.

ಪಂಚಭೂತ ಲಿಂಗದ ಚಿತ್ರಗಳು : ಅಂತರ್ಜಾಲ ಕೃಪೆ